`ಆರ` ಯಾವುದೇ ಕಮರ್ಷಿಯಲ್ ಅಂಶಗಳಿಲ್ಲದ ಕುಂದಾಪುರ ಸುತ್ತಮುತ್ತಲ ಭಾಗದ ಪರಿಸರ, ಕಥೆಯನ್ನು ಹೊಂದಿರುವ ಚಿತ್ರ. ಬಹುತೇಕ ಹೊಸಬರ ಪ್ರಯತ್ನವಾಗಿ ಈ ಚಿತ್ರ ಮೂಡಿಬಂದಿದೆ. ಈ ಚಿತ್ರ ಮಾಡಿರುವ ನಿರ್ದೇಶಕರಲ್ಲಿ ಒಂದೊಳ್ಳೆೆಯ ಉದ್ದೇಶವಿದೆ, ಜೊತೆಗೆ ಅದನ್ನು ವಿಭಿನ್ನವಾಗಿ ಹೇಳಬೇಕೆಂಬ ತವಕವಿದೆ, ರೆಗ್ಯುಲರ್ ಶೈಲಿಯನ್ನು ಬಿಟ್ಟು ಪ್ರೇಕ್ಷಕರ ಮನಸ್ಸು ಗೆಲ್ಲಬೇಕು ಎಂದು ಪ್ರಾಂತೀಯ ಸೊಗಡನ್ನು ತೆರೆಮೇಲೆ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ.
`ಆರ` ಸಿನಿಮಾದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿವೆ. ಒಂದು ಅರಣ್ಯ ನಾಶವನ್ನು ತಡೆಗಟ್ಟುವುದು ಮತ್ತೊಂದು ಮುಗ್ಧ ಮನುಷ್ಯ ಸಂದರ್ಭ ಎದುರಾದಾಗ ಹೇಗೆ ಶಕ್ತಿವಂತನಾಗುತ್ತಾನೆ ಎಂಬುದನ್ನು ಹೇಳುವುದು. ವನ್ಯಸಂಪತ್ತನ್ನು ಸಂರಕ್ಷಿಸುವ ಕೆಲಸದಲ್ಲಿ ಆ ದೇವರೇ ನಮ್ಮ ಜೊತೆ ನಿಲ್ಲುತ್ತಾನೆ. ಕಾಡಿನ ದೇವರು, ನಾಗಬನಗಳು ಅರಣ್ಯವನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ. ಈ ವಿಷಯವನ್ನು ಸಿನಿಮಾದಲ್ಲಿ ಕಥೆಯ ಓಟಕ್ಕೆ ಅನುಗುಣವಾಗಿ ಬಳಸಿಕೊಳ್ಳಲಾಗಿದೆ. ಮನುಷ್ಯನ ದುರಾಸೆ, ಅಹಂಕಾರ ಹೇಗೆ ಆತನನ್ನು ಕೆಟ್ಟ ಹಾದಿಗೆ ದೂಡುತ್ತದೆ ಎಂಬುದನ್ನು ಹೇಳಲಾಗಿದೆ. ಊರಿನ ದೈವಿಕ ಕುಟುಂಬದ ಹಿರಿಯ ವ್ಯಕ್ತಿ ನರಸಿಂಹ, ಆತನ ಮೊಮ್ಮಗ ಮುಗ್ಧ ಯುವಕನಾದ ಆರ(ರೋಹಿತ್) ತಾತನ ಬುದ್ದಿಮಾತನ್ನು ಕೇಳದೆ ಕಾಡಿನ ಪರಿಸರ ಬಿಟ್ಟು ನಾಡಿಗೆ ಬರುತ್ತಾನೆ.
ನಾಡಿನಲ್ಲಿ ಸ್ನೇಹಿತರು ತೋರುವ ವಿಶ್ವಾಸವನ್ನು ನಿಜವೆಂದೇ ನಂಬುತ್ತಾನೆ. ತನ್ನ ಬಳಿಯಿದ್ದ ಹಣ ಖಾಲಿಯಾದಾಗಲೆ ಅವರ ಅಸಲಿ ಮುಖದ ಪರಿಚಯವಾಗುತ್ತದೆ. ನಾಡಿನ ಜನರ ಸಹವಾಸವೇ ಸಾಕೆಂದು ಮರಳಿ ತಾತ ನರಸಿಂಹನ ಬಳಿಗೇ ಬರುತ್ತಾನೆ. ಅಲ್ಲಿ ತನ್ನ ವಂಶಜರು ಸಂರಕ್ಷಿಸಿಕೊಂಡು ಬಂದಿದ್ದ ಕಾಡಿನ ಶ್ರೀಗಂಧದ ಸಂಪತ್ತನ್ನು ಹೇಗೆ ದುಷ್ಟರಿಂದ ರಕ್ಷಿಸುತ್ತಾನೆ ಎನ್ನುವುದೇ ಆರ ಚಿತ್ರದ ಕಥಾವಸ್ತು. ಆರನ ಪಾತ್ರ ಮಾಡಿರುವ ರೋಹಿತ್ ಎರಡು ಶೇಡ್ ನಲ್ಲೂ ಚೆನ್ನಾಗಿ ಅಭಿನಯಿಸಿದ್ದಾರೆ. ಆರನ ಗೆಳತಿ ಮೀರಾಳ ಪಾತ್ರ ಮಾಡಿರುವ ದೀಪಿಕಾ ಆರಾಧ್ಯ ಸಿಕ್ಕ ಕಡಿಮೆ ಅವಕಾಶದಲ್ಲೇ ಉತ್ತಮ ಅಭಿನಯ ನೀಡಿದ್ದಾರೆ.ಚಿತ್ರದ ಕ್ಯಾಮೆರಾ ವರ್ಕ್, ಸಂಗೀತ ಕಥೆಯ ಓಟಕ್ಕೆ ಪೂರಕವಾಗಿದೆ.